➡ಮೇಷ್ಟ್ರಿಗೂ ಅರ್ಥವಾಗದ ಹಳೆ ವರ್ಗಾ
ಬೆಂಗಳೂರು: ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಕರಿಗೂ ಅರ್ಥವಾಗದೇ ಕಗ್ಗಂಟಾಗಿ ಪರಿಣಮಿಸಿದ್ದ 2007ರ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು ಮತ್ತಷ್ಟು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಈ ವರ್ಷ ಸಾಮೂಹಿಕವಾಗಿ ಶಿಕ್ಷಕರ ವರ್ಗಾವರ್ಗಿ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಸದ್ಯ ಶಿಕ್ಷಕರ ವರ್ಗಾವಣೆಗೆ 2007ರ ನೀತಿಯಂತೆ ಕೌನ್ಸೆಲಿಂಗ್ ಮಾದರಿಯಲ್ಲಿ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಈ ವರ್ಗಾವಣೆ ನೀತಿ ತಮಗೇ ಅರ್ಥವಾಗುತ್ತಿಲ್ಲ. ಇದು ಅಷ್ಟು ಕಠಿಣ ಮಾತ್ರವಲ್ಲ, ಭಾರಿ ಗೊಂದಲಗಳಿಂದಲೂ ಕೂಡಿದೆ ಎಂದು ಸ್ವತಃ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಗಾವಣೆಗಾಗಿ ಯಾರೂ ಬೆಂಗಳೂರು ಬಳಿ ಸುಳಿಯದಂತೆ ಮಾಡಲಾಗುವುದು ಎಂದರು.
ಪಾರದರ್ಶಕ ಮತ್ತು ಸರಳ ನೀತಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಆದರೆ ವರ್ಗಾವಣೆ ಕುರಿತಂತೆ ಗೊಂದಲ ಎದ್ದಿರುವುದು ಶಿಕ್ಷಣ ಸಚಿವ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವಿಭಿನ್ನ ಹೇಳಿಕೆಗಳಿಂದಾಗಿ. ವರ್ಗಾವಣೆ ಕುರಿತಂತೆಯೇ ಮಾತನಾಡಿರುವ ಕಾರ್ಯದರ್ಶಿ ಅಜಯ್ ಸೇಠ್, ಹೆಚ್ಚುವರಿ ಶಿಕ್ಷಕರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ಮೂಲಕ ಮರು ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ. ಇದಾದ ಬಳಿಕ ಮಾರ್ಗಸೂಚಿ ಹೊರಡಿಸಿ ಕೆಲವೊಂದು ಮಾರ್ಗಸೂಚಿ ಬದಲಾವಣೆ ಮಾಡಿ, ಕೋರಿಕೆ ಸಲ್ಲಿಸುವ ಶಿಕ್ಷಕರ ವರ್ಗಾವಣೆ ಮಾಡಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದರೊಂದಿಗೆ ಶಿಕ್ಷಕರ ವರ್ಗಾವಣೆ ಇನ್ನೂ ಅಸ್ಪಷ್ಟ ಎನ್ನುವಂತಾಗಿದೆ.
ಹೊಸ ಮಾರ್ಗಸೂಚಿ ಏನು?
ಈಗ ಇರುವ ವರ್ಗಾವಣೆ ನೀತಿಯಲ್ಲಿ ತಾಲೂಕನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ತಾಲೂಕಿನ ಒಳಗೇ ವರ್ಗಾವಣೆಗೆ ಅವಕಾಶವಿದ್ದು ತಾಲೂಕಿನಿಂದ ತಾಲೂಕಿಗೂ ವರ್ಗಾವಣೆಗೆ ಅವಕಾಶವಿಲ್ಲ. ಆದರೆ ನೂತನ ಮಾರ್ಗಸೂಚಿಯಂತೆ ತಾಲೂಕು ಬದಲಾಗಿ ಇಡೀ ಜಿಲ್ಲೆಯನ್ನೇ ಒಂದು ಘಟಕವಾಗಿ ಪರಿಗಣಿಸಲಾಗುವುದು. ಈ ಕುರಿತು ಶಿಕ್ಷಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಈ ಘಟಕ ಬದಲಾವಣೆ ಲಾಭವನ್ನು ಸಾವಿರಾರು ಶಿಕ್ಷಕರು ಪಡೆಯಬಹುದಾಗಿದೆ. ಮಾತ್ರವಲ್ಲ ಇನ್ನು ಮುಂದೆ ಜಿಲ್ಲೆಗಳ ನಡುವೆ ವರ್ಗಾವಣೆಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರಚಿಸಲಾಗುವುದು.
ಎಲ್ಲ ಶಾಲೆಗಳಲ್ಲೂ ಶಿಕ್ಷಕರಿರುವಂತೆ ನೋಡಿಕೊಳ್ಳುವುದು. ಕೊಠಡಿಗೊಬ್ಬ ಶಿಕ್ಷಕ, ವಿಷಯವಾರು ಶಿಕ್ಷಕರನ್ನು ನಿಯೋಜಿಸಲುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ರುವ ಶಿಕ್ಷಕರ ಕೊರತೆ ತುಂಬಿಸಲು ಶಿಕ್ಷಕರ ನೇಮಕಾತಿ ಕೂಡಾ ನಡೆಸಲಾಗುತ್ತದೆ
ಪತಿ ಪತ್ನಿ ಪ್ರಕರಣ:
ರಾಜ್ಯದಲ್ಲಿ ಸಾಕಷ್ಟು ಪತಿ ಪತ್ನಿಯರು ಶಿಕ್ಷಕರಾಗಿದ್ದು ಇವರಲ್ಲಿ ಅನೇಕರು ಉತ್ತರ ದಕ್ಷಿಣ ಎಂಬಂತೆ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುವಂತಾಗಿದೆ. 2007ರ ವರ್ಗಾವಣೆ ನೀತಿಯಂತೆ ಇವರ ವರ್ಗಾವಣೆ ಸುಲಭ ಸಾಧ್ಯವಿರಲಿಲ್ಲ. ತಾಲೂಕು ಘಟಕ ಮೊದಲಾದ ನಿಬಂಧನೆಗಳ ಜೊತೆಗೆ ಕೇವಲ ಶೇ.1ರಷ್ಟು ಮಾತ್ರ ವರ್ಗಾವಣೆ ಅವಕಾಶ ಇನ್ನು ಮುಂದೆ ರದ್ದಾಗಿ ಈ ಪ್ರಮಾಣ ಶೇ.3ಕ್ಕೇರಿಸಲು ಚಿಂತನೆ ನಡೆಸಲಾಗಿದೆ. ಆಗ ಈಗ ಇರುವ ಮೂರುಪಟ್ಟು ಶಿಕ್ಷಕರ ವರ್nಗಾವಣೆಗೆ ಅವಕಾಶವಾಗಲಿದೆ.
ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಶಿಕ್ಷಕರ ಪತಿ ಪತ್ನಿ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುತೇಕರು ಹತ್ತಿರವೂ ಅಲ್ಲದ ಜಿಲ್ಲೆಗಳಲ್ಲಿ ಶಿಕ್ಷಕರಾಗಿದ್ದು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಮುಂದೆ ಸರಳ ವರ್ಗಾವಣೆ ನೀತಿಯಿಂದ ಪತಿ ಪತ್ನಿಯರ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಗಣಿಸಿ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಸೇಠ್ ಹೇಳಿದ್ದಾರೆ.
2007ರ ನೀತಿ ಏನು?
2007ರ ಕಾಯಿದೆಯಂತೆ ಗ್ರಾಮೀಣ ಭಾಗಗಳಲ್ಲಿ ಶಿಕ್ಷಕರ ಕೊರತೆ ತಡೆಯುವ ನಿಟ್ಟಿನಲ್ಲಿ ಕೆಲವೊಂದು ಬಿಗಿ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಮೊದಲ ನೇಮಕಾತಿಯಲ್ಲೇ ಗ್ರಾಮೀಣ ಸೇವೆ ಕಡಾಯ ಮೊದಲಾದ ನಿಯಮಗಳಿದ್ದವು. 2005ಕ್ಕೂ ಮುನ್ನ ನಗರಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರ ಮುಂದಿನ ವರ್ಗಾವಣೆ ಗ್ರಾಮಾಂತರ ಪ್ರದೇಶಕ್ಕೆ ಕಡ್ಡಾಯವಾಗಿತ್ತು. ನೇಮಕಾತಿ ಆದ ಐದು ವರ್ಷಗಳ ಕಾಲ ನೇಮಕಾತಿ ಆದ ಗ್ರಾಮೀಣ ಪ್ರದೇಶದಿಂದ ವರ್ಗಾವಣೆ ಆಗುವಂತಿರಲಿಲ್ಲ. ಪತಿ ಪತ್ನಿ ಪ್ರಕರಣದಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶವಿತ್ತು. ಪರಸ್ಪರ ವರ್ಗಾವಣೆಗೆ ಸೇವಾವಧಿಯಲ್ಲಿ ಒಂದೇ ಬಾರಿ ಅವಕಾಶವಿತ್ತು. ಸರ್ವಶಿಕ್ಷಣ ಅಭಿಯಾನದಡಿ ನೇಮಕಗೊಂಡ ವಿಷಯವಾರು ಶಿಕ್ಷಕರಿಗೆ ವಿಷಯವಾರು ಹುದ್ದೆಗಳ ಲಭ್ಯತೆ ಆಧಾರದಲ್ಲೇ ವರ್ಗಾವಣೆ ಆಗಬೇಕಿತ್ತು.
ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆಗೆ 2007ರಲ್ಲಿ ಜಾರಿಗೆ ತಂದಿರುವ ಪದ್ಧತಿ ಸಾಕಷ್ಟು ಗೊಂದಲಗಳಿಂದ ಕೂಡಿದೆ. ತಾಲೂಕು ಘಟಕ, ಜಿಲ್ಲಾ ಘ.
ವರ್ಗಾವಣೆ ಹೊಸ ಮಾರ್ಗಸೂಚಿ ಏನು?
* ತಾಲೂಕು ಘಟಕದ ಬದಲು, ಜಿಲ್ಲೆಯನ್ನೇ ಘಟಕವಾಗಿ ಪರಿಗಣನೆ
* ಜಿಲ್ಲೆ- ಜಿಲ್ಲೆಗಳ ನಡುವೆಯೂ ವರ್ಗಾವಣೆ
* ಪತಿ- ಪತ್ನಿ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ
* ಶೇ.1ರ ಬದಲಾಗಿ ಒಟ್ಟು ಶೇ.3 ವರ್ಗಾವಣೆ
* ನಿಯೋಜನೆ- ಮರು ನಿಯೋಜನೆಯಿಂದ ಸಾಕಷ್ಟು ವರ್ಗಾವಣೆಗೆ ಅವಕಾಶ
* ವರ್ಗಾವಣೆ ಗೊಂದಲಗಳ ನಿವಾರಣೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ